Pages

Saturday, November 23, 2013

ಕಲರ್ಸ್ ಇನ್ ಬೆಂಗಳೂರು:




ಚಿತ್ರದಲ್ಲಿ ನಾಯಕಿ ಹುಚ್ಚಿಯಂತೆ ಕೂಗಾಡುತ್ತಾ ನಗುತ್ತಾಳೆ. ಇನ್ನೇನು ಹುಚ್ಚಿಯಾದಳು ಎಂದುಕೊಳ್ಳುವಷ್ಟರಲ್ಲಿ ಸರಿಹೋಗುತ್ತಾಳೆ. ಆದರೆ ಅಷ್ಟೊತ್ತು ನೋಡಿದ್ದ ಪ್ರೇಕ್ಷಕ ಮಾತ್ರ ಹುಚ್ಚನಾಗಿರುತ್ತಾನೆ. ನಾಯಕಿ ಸರಿಯಾಗಿದ್ದರೂ ಪ್ರೇಕ್ಷಕನ ಹುಚ್ಚು ಬಿಡದೆ ತಲೆ ತಲೆ ಚಚ್ಚಿಕೊಳ್ಳುತ್ತಾನೆ.
ಏನೇನೂ ಗೊತ್ತಿರದ ಒಬ್ಬ ವ್ಯಕ್ತಿಗೆ ಒಂದು ಕ್ಯಾಮೆರಾ ಒಂದಷ್ಟು ಅಭಿನಯದ ಗಂಧಗಾಳಿಯಿಲ್ಲದ ಜನರನ್ನು ಕೊಟ್ಟು ಸಿನಿಮಾ ಮಾಡು ಎಂದರೆ ಹೇಗೆ ಮಾಡುತ್ತಾರೋ ಅದೇ ರೀತಿ ಸಿನಿಮಾ ಮಾಡಿದ್ದಾರೆ ನಿರ್ದೇಶಕ-ನಟ ಶ್ರೀವತ್ಸ. ಅವರಿಗ್ಯಾಕೆ ಸಿನಿಮಾ ಮಾಡಬೇಕು ಎನಿಸಿತು, ನಟರಾಗಬೇಕು ಎನಿಸಿತು ನಿರ್ಮಾಪಕರೇಕೆ ಈ ಚಿತ್ರಕ್ಕೆ ಹಣ ಹಾಕಿದರೂ ಎಂಬಂತ ಬೇತಾಳ ಪ್ರಶ್ನೆಗಳಿಗೆ ತಲೆ ತಲೆ ಚಚ್ಚಿ ಕೊಂಡು ಕೂದಲು ಕಿತ್ತುಕೊಂಡರೂ ಉತ್ತರ ಸಿಕ್ಕುವುದಿಲ್ಲ.
ನಟ ನಿರ್ದೇಶಕ ಶ್ರೀವತ್ಸರಿಗೆ ಎಲ್ಲೂ ಕೆಲಸ ಮಾಡಿದ ಅನುಭವವಿಲ್ಲ. ಹೋಗಲಿ ಕೆಲಸ ಮಾಡುವವರನ್ನೂ ನೋಡಿದ ಅನುಭವವೂ ಇಲ್ಲ. ಅದೂ ಹೋಗಲಿ. ಅವರಿಗೆ ಸಿನಿಮಾ ನೋಡುವುದೂ ಗೊತ್ತಿಲ್ಲ ಎನ್ನಬಹುದು. ಚಿತ್ರದಲ್ಲಿ ಯಾವುದೂ ಇಲ್ಲ. ದೊಡ್ಡ ಪರದೆಯ ಮೇಲೆ ಸುಮ್ಮನೆ ಹುಚ್ಚುಚ್ಚಾಗಿ ದೃಶ್ಯಗಳು ಬಂದು ಹೋಗುತ್ತವೆ. ಮಾತುಗಳಿಗೂ ಕಲಾವಿದರ ತುಟಿ ಚಾಲನೆಗೂ ಸಂಬಂಧವೇ ಇಲ್ಲ. ಹಾಗೆಯೇ ದೃಶ್ಯದಲ್ಲಿನ ದ್ರವ್ಯಕ್ಕೂ ಮಾತಿಗೂ ಸಂಬಂಧವೇ ಇಲ್ಲ. ಮತ್ತು ಕ್ಯಾಮೆರಾ ಕೆಲಸ,  ಸಂಕಲನ ಮುಂತಾದವುಗಳು ಚಿತ್ರದಲ್ಲಿವೆಯೇ ಎಂಬ ಪ್ರಶ್ನೆಗೂ ಉತ್ತರವಿಲ್ಲ.
ಬೆಂಗಳೂರಿನ ಮೆಟ್ರೋ ಜೀವನ ಶೈಲಿಯನ್ನು ತೋರಿಸಲು ಹೋಗಿ ಏನೇನೋ ತೋರಿಸುತ್ತಾರೆ ನಿರ್ದೇಶಕರು. ದೃಶ್ಯದಲ್ಲಿ ಸಂಭಾಷಣೆ ಹೇಳದೆ ಸುಮ್ಮನೆ ಎಲ್ಲಾ ಮಾತಿಗೂ ಏನೋ ಹೇಳಿ ನಗುತ್ತಾರೆ ನಿರ್ದೇಶಕರು, ಕತೆ ಬಿಡಿ, ತಮಾಷೆ ಬಿಡಿ, ಸಾಹಸ ಬಿಡಿ...ಕೊನೆಗೆ ಈ ಸಿನೆಮಾವನ್ನೂ ಬಿಟ್ಟು ಬಿಡಿ. ಆರೋಗ್ಯಕ್ಕೆ ಮನಸ್ಸಿಗೆ ಒಳ್ಳೆಯದು.
ಕತೆ ಎಂದರೇನು, ಚಿತ್ರಕತೆ ಎಂದರೇನು ಎಂಬುದನ್ನು ನಿರ್ದೇಶಕರಿಗೆ ಹೇಳಿಕೊಡಬೇಕು ಎನಿಸಿದರೆ ನೀವೇ ಕಷ್ಟಕ್ಕೆ ಬೀಳುತ್ತಾರೆ. ಹಾಗೆ ನೋಡಿದರೆ ಪ್ರತಿಯೊಂದನ್ನೂ ನಿರ್ದೇಶಕ-ನಟ ಶ್ರೀವತ್ಸಗೆ ಹೇಳಿಕೊಡಬೇಕು. ಯಾವೊಂದು ವಿಭಾಗವೂ ಇಷ್ಟು ಕಳಪೆಯಾಗಿರುವ ಇನ್ನೊಂದು ಕನ್ನಡ ಚಿತ್ರ ಇತ್ತೀಚಿಗೆ ಬಂದಿದೆಯಾ..? ಶ್ರೀವತ್ಸರೆ ಉತ್ತರಿಸಬೇಕು.
ಹಣದ ಹುಚ್ಚಿನ ಹುಡುಗಿ ವಿವಾಹಿತನನ್ನು ಪಟಾಯಿಸಲು ಪ್ರಯತ್ನಿಸುತ್ತಾಳೆ, ಮನೆ ಹುಚ್ಚಿನ ಯುವಕ ಹಣಕ್ಕಾಗಿ ದರೋಡೆ ಮಾಡಲು ನೋಡುತ್ತಾನೆ, ಹುಡುಗಿಯ ಪ್ರೀತಿ ಗೆಲ್ಲಲು ಹಣ ಬೇಕಾದ್ದರಿಂದ ಮತ್ತೊಬ್ಬ ಅದಕ್ಕೆ ಕೈ ಜೋಡಿಸುತ್ತಾನೆ, ನಾಯಕನೂ ಅದಕ್ಕೆ ಜೊತೆಯಾಗಿ ಒಂದಷ್ಟು ಪ್ರಯತ್ನ ಪಡುತ್ತಾರೆ..ಹವಾಲ ಹಣವನ್ನು ತಮ್ಮದಾಗಿಸಿಕೊಳ್ಳುತ್ತಾರೆ..ಇವಿಷ್ಟು ಕತೆಯನ್ನು ಪೊಲೀಸನೊಬ್ಬ ಕೆಟ್ಟದಾದ ನಿರ್ದೇಶಕನಿಗೆ ಹೇಳುತ್ತಾನೆ..ಪಾಪಿ ಪ್ರೇಕ್ಷಕ ಕೇಳಿಸಿ ನೋಡಿಸಿ ಹುಚ್ಚನಾಗುತ್ತಾನೆ. ಇದು ಚಿತ್ರದ ಕತೆಯ ವ್ಯಥೆ. ಹಾಗಂತ ಇವಿಷ್ಟೂ ಅಷ್ಟು ಸರಳವಾಗಿ ಚಿತ್ರ ನೋಡಿದಾಕ್ಷಣ ಅರ್ಥವಾಗುವುದಿಲ್ಲ. ಇಡೀ ಚಿತ್ರವೇ ಸಂಕಲನವೇ ಮಾಡದ ಕಚ್ಚಾ ಚಿತ್ರಣದ ರೀಲುಗಳ ರಾಶಿಯಂತಿದೆ. ನೋಡುವಾಗ ದೃಶ್ಯಗಳನ್ನು ಮನಸ್ಸಿನಲ್ಲೇ ಸಂಕಲನ ಮಾಡುವ ಕಾರ್ಯ ಪ್ರೇಕ್ಷಕನದು.
ಒಂದೇ ಮಾತು: ಕಲರ್ಸ್ ಇನ್ ಬೆಂಗಳೂರು ಕಸುಬುಬಾರದವರ ಒಂದು ಕಲಸುಮೇಲೋಗರದ ಚಿತ್ರ.

No comments:

Post a Comment